ಸೂರತ್ : ರಣಜಿ ಟ್ರೋಫಿ ಕ್ರಿಕೆಟ್ ನಲ್ಲಿ ಕರ್ನಾಟಕದ ಅನುಭವಿ ಬ್ಯಾಟ್ಸ್ ಮನ್ ಆದ ಮನೀಷ್ ಪಾಂಡೆ ಅವರ ಸಮಯೋಜಿತ ಬ್ಯಾಟಿಂಗ್ ಬಲದಿಂದಾಗಿ ಕರ್ನಾಟಕ ತಂಡವು ರಣಜಿ ಟ್ರೋಫಿಯ ʼಸಿʼ ಬಣದ ಪಂದ್ಯದಲ್ಲಿ ರೈಲ್ವೇಸ್ ವಿರುಧ್ಧ ಒಂದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
ಪಂದ್ಯ ಗೆಲ್ಲಲು 226 ರನ್ ಗಳಿಸುವ ಸವಾಲು ಪಡೆದ ಕರ್ನಾಟಕ ತಂಡವು ಮೂರನೇ ದಿನ ಪಾಂಡೆ ಅವರ ತಾಳ್ಮೆಯ ಆಟದಿಂದಾಗಿ 9 ವಿಕೆಟ್ ಗೆ 229 ರನ್ ಸೇರಿಸಿ ಜಯಗಳಿಸಿತು. 121 ಎಸೆತ ಎದುರಿಸಿದ
Manish Pandey ಆರು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 67 ರನ್ ಗಳಿಸಿ ಅಜೇಯರಾಗಿ ಉಳಿದರು. ರೈಲ್ವೇಸ್ ತಂಡವು 8 ವಿಕೆಟಿಗೆ 209 ರನ್ನುಗಳಿಂದ ದಿನದಾಟ ಆರಂಭಿಸಿ 244 ರನ್ನಿಗೆ ಆಲೌಟಾಗಿತ್ತು. ರೈಲ್ವೇಸ್ ಕುಸಿತಕ್ಕೆ ಕಾರಣರಾದ ವೈಶಾಖ್ ವಿಜಯಕುಮಾರ್ 67 ರನ್ನಿಗೆ 5 ವಿಕೆಟ್ ಕಿತ್ತರು.
ಲೀಗ್ ಹಂತದಲ್ಲಿ ಇನ್ನೆರಡು ಪಂದ್ಯಗಳು ಬಾಕಿ ಉಳಿದಿದ್ದು ಕರ್ನಾಟಕ ಮುಂದಿನೆರಡು ಪಂದ್ಯಗಳಲ್ಲಿ ತಮಿಳುನಾಡು ಮತ್ತು ಚಂಡೀಗಢ ವಿರುಧ್ದ ಆಡಬೇಕಾಗಿದೆ.
ಒಂದು ವಿಕೆಟ್ ಗೆ 70 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಕರ್ನಾಟಕ ತಂಡವು ಬಳಿಕ ಬ್ಯಾಟಿಂಗ್ ಕುಸಿತಕ್ಕೆ ಒಳಗಾಗಿ 99 ರನ್ ತಲುಪುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಆ ಬಳಿಕ ಪಾಂಡೆ ಸಹಿತ ಶರತ್ ಶ್ರೀನಿವಾಸ್ (23) ,ವೈಶಾಖ್ (38) ಅವರ ಉತ್ತಮ ಆಟದಿಂದಾಗಿ ಕರ್ನಾಟಕ ತಂಡ ರೋಚಕ ಗೆಲುವು ಕಾಣುವಂತಾಯಿತು.